ವಿಧುಶೇಖರ ಭಾರತಿ, ಶ್ರೀ ವಿಧುಶೇಖರ ಭಾರತಿ, (ಕನ್ನಡ) శ్రీ విధుశేఖర భారతీ స్వామిన, (ತೆಲುಗು) ஸ்ரீ விதுசேகர பாரதி, (ತಮಿಳು) श्री विधुशेखरा भारती, (ದೇವನಾಗರಿ) ಎಂದು ಭಕ್ತವೃಂದಕ್ಕೆ ಪರಿಚಯವಾಗಲಿರುವ 'ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ' ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ೨೩, ಶುಕ್ರವಾರ, ಜನವರಿ,೨೦೧೫ ರಂದು, ಸನ್ಯಾಸ ದೀಕ್ಷೆ ಅವರಿಗೆ ನೀಡಲಾಗಿದ್ದು, ಶ್ರೀ ವಿಧುಶೇಖರ ಭಾರತಿಯವರಿಗೆ 'ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ತಮ್ಮ ಶಿಷ್ಯನಿಗೆ ಮರು ನಾಮಕರಣ ಮಾಡಿ, 'ವಿಧುಶೇಖರ'ರನ್ನು ತಮ್ಮ ೩೭ ನೆಯ ಉತ್ತರಾಧಿಕಾರಿ ಎಂದು ಘೋಷಿಸಿದರು. ವಿಧು ಎಂದರೆ ಚಂದ್ರ, ಮಠದ ಗುರು ಪರಂಪರೆಯ ೩೪ ನೇ ಗುರುಗಳಾದ ಜಗದ್ಗುರು 'ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿ'ಯ ಹೆಸರನ್ನೇ ಇದೀಗ ೩೭ ನೇ ಯತಿಗಳಿಗೂ ಪ್ರದಾನಿಸಲಾಗಿದೆ. === ಜನನ,ಬಾಲ್ಯ,ವಿದ್ಯಾಭ್ಯಾಸ === ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ, 'ಕುಪ್ಪಾ ಶಿವ ಸುಬ್ರಹ್ಮಣ್ಯ ಅವಧಾನಿ', ಮತ್ತು 'ಸೀತಾ ನಾಗಲಕ್ಷ್ಮಿ' ದಂಪತಿಗಳ ಪುತ್ರನಾಗಿ ಜುಲೈ, ೨೪,೧೯೯೩ ರಂದು, ತಿರುಪತಿಯಲ್ಲಿ ಜನಿಸಿದರು. ಮೊದಲು, ಶರ್ಮಾ ಪರಿವಾರ ಸಿಕಂದರಾಬಾದಿನ 'ಸೈನಿಕ್ ಪುರಿ'ಯಲ್ಲಿ ವಾಸಿಸುತ್ತಿದ್ದರು. ನಂತರ 'ಎ.ಎಸ್.ರಾವ್' ನಗರಕ್ಕೆ ಹೋಗಿ ನೆಲೆಸಿದರು. ಸಿಕಂದರಾಬಾದಿನ ಸೈನಿಕ್ ಪುರಿಯ 'ಭವಾನ್ಸ್ ಸ್ಕೂಲ್' ನಲ್ಲಿ ಎರಡನೆಯ ತರಗತಿಯ ವರೆಗೆ ವಿದ್ಯಾಭ್ಯಾಸಮಾಡಿದರು. ಮನೆಯಲ್ಲಿಯೇ ತಂದೆಯವರ ಬಳಿ ವೇದಾಧ್ಯಯನವನ್ನು ಅಭ್ಯಾಸಮಾಡಿದರು. ಅಜ್ಜ 'ಕುಪ್ಪಾ ರಾಮಗೋಪಾಲ ವಜ್ಪೇಯಾಜಿ' ಮತ್ತು ಅಜ್ಜಿ, 'ಕಲ್ಪಕಾಂಬ', ವೆಂಕಟೇಶ್ವರ ಶರ್ಮರಿಗೆ ವೇದ,ಉಪನಿಷತ್,ಮತ್ತು ಪುರಾಣಗಳ ಪಠನವಾಗುತ್ತಿತ್ತು. ವೆಂಕಟೇಶ್ವರ ಶರ್ಮ, ೨೦೦೯ ರಲ್ಲಿ 'ಶೃಂಗೇರಿ ಮಠ'ಕ್ಕೆ ಸೇರಿದರು. 'ಕುಪ್ಪಾ ಶಿವ ಸುಬ್ರಹ್ಮಣ್ಯ ಅವಧಾನಿ'ಯವರಿಗೆ, ಇಬ್ಬರು ಮಕ್ಕಳು. ಹಿರಿಮಗ, 'ವೆಂಕಟ ಕೊಂಡಿನಿಯ', ಮುಂಬೈನ 'ಆರ್.ಐ.ಎಲ್.ಸಂಸ್ಥೆ' ಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. === ನೂತನ ಯತಿಗಳು === ಕಾಷಾಯ ವಸ್ತ್ರ ಧರಿಸಿದ ನೂತನ ಯತಿಗಳು, ಪದಗ್ರಹಣ ಸಮಾರಂಭ ನೆರವೇರಿತು. ನದಿಯ ಸಂಧ್ಯಾವಂದನೆ ಮಂಟಪದ ಬಳಿ ಪುರುಷ ಸೂಕ್ತ ಹಾಗೂ ವಿರಜಾ ಹೋಮಗಳು ನೆರವೇರಿದವು. ನಂತರ, ವೆಂಕಟೇಶ ಶರ್ಮರು "ಸನಾತನ ಧರ್ಮದ ಉನ್ನತಿಗಾಗಿ ತಮ್ಮ ಸನ್ಯಾಸ ಧರ್ಮದ ಪರಿಪಾಲನೆಯ ಕೈಂಕರ್ಯಕ್ಕೆ ಬಂಧು ಬಾಂಧವರಿಂದ ಅಡೆತಡೆಯಾಗಬಾರದು' ಎಂದು ವಿನಂತಿಸಿದರು. ಜನಿವಾರ, ಉಡುದಾರ, ತಲೆ ಕೂದಲು ಹಾಗೂ ವಸ್ತ್ರಗಳನ್ನು ತ್ಯಜಿಸಿದರು. ಬಳಿಕ, 'ಭಾರತಿ ತೀರ್ಥರು' ಕಾಷಾಯ ವಸ್ತ್ರ, ದಂಡ ಕಮಂಡಲಗಳನ್ನು ವೆಂಕಟೇಶ ಶರ್ಮರಿಗೆ ನೀಡುವ ಮೂಲಕ ಸನ್ಯಾಸ ದೀಕ್ಷೆ ದಯಪಾಲಿಸಿದರು. ಬಳಿಕ, ಶ್ರೀಗಳು ನರಸಿಂಹವನದಲ್ಲಿರುವ ಹಿಂದಿನ ಜಗದ್ಗುರುಗಳಾದ 'ಅಭಿನವ ವಿದ್ಯಾ ತೀರ್ಥರು', 'ಚಂದ್ರಶೇಖರ ಭಾರತಿ ತೀರ್ಥರು' ಮತ್ತು 'ನರಸಿಂಹ ಭಾರತಿ ಸ್ವಾಮೀಜಿಗಳ ಸಮಾಧಿ' ಸ್ಥಳಕ್ಕೆ ತೆರಳಿದರು. === ಪ್ರಣವೋಪದೇಶ === ನಂತರ, 'ಅಧಿಷ್ಠಾನ ಮಂದಿರ'ದಲ್ಲಿ 'ಭಾರತಿ ತೀರ್ಥ'ರು ತಮ್ಮ ಶಿಷ್ಯನಿಗೆ 'ಪ್ರಣವೋಪದೇಶ', 'ಮಹಾ ವಾಕೋಪದೇಶ' ಅನುಗ್ರಹಿಸಿದರು. "ಅಹಂಬ್ರಹ್ಮಾಸಿ'ಎಂಬ ಪೀಠದ ಆಧ್ಯಾತ್ಮಿಕ ವಾಕ್ಯವನ್ನು ಉಪದೇಶಿಸಿದರು. "ಶ್ರೀ ಅಭಿನವ ವಿದ್ಯಾತೀರ್ಥರಿಂದ ಸನ್ಯಾಸತ್ವ ಪಡೆದು ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಇಂದು ಇದೇ ಗುರುತರ ಜವಾಬ್ದಾರಿಯನ್ನು ನನ್ನ ನೆಚ್ಚಿನ ಶಿಷ್ಯ ಶರ್ಮರಿಗೆ ನೀಡುತ್ತಿದ್ದೇನೆ. ತಮ್ಮ ಅನುಜ್ಞೆಯೊಂದಿಗೆ ಆಶೀರ್ವಾದವನ್ನು ಬೇಡುತ್ತಿದ್ದೇನೆ ಎಂದು ಪ್ರಾರ್ಥಿಸಿಕೊಂಡರು. ಬಳಿಕ, 'ಅಭಿನವ ವಿದ್ಯಾತೀರ್ಥ ಅಧಿಷ್ಠಾನ ಮಂದಿರ'ದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. === ನರಸಿಂಹವನದಿಂದ ದೋಣಿಯಲ್ಲಿ ಆಗಮನ === ವಿಧುಶೇಖರ ಭಾರತಿಯವರು ನರಸಿಂಹವನದಿಂದ ಅಲಂಕೃತವಾದ ದೋಣಿಯಲ್ಲಿ ತುಂಗಾ ನದಿಯ ಆಚೆ ದಡಕ್ಕೆ ತೆರಳಿ 'ಪರ್ಯಂಕ ಶೌಚದ ವಿಧಿ' ಮುಗಿಸಿ, ಮಠದ ಆವರಣಕ್ಕೆ ಬಂದರು. ನಂತರ ಉಭಯ ಯತಿಗಳು ಶಾರದಾಂಬೆಯ ಗರ್ಭಗುಡಿಗೆ ಆಗಮಿಸಿದರು. ಅಲ್ಲಿ ಕಿರಿಯ ಯತಿಗಳನ್ನು 'ವ್ಯಾಖ್ಯಾನ ಸಿಂಹಾಸನ'ದ ಮೇಲೆ ಕುಳ್ಳಿರಿಸಿ ಅವರ ತಲೆಯ ಮೇಲೆ ಸಾಲಿಗ್ರಾಮವನ್ನಿಟ್ಟು ಹಿರಿಯ ಶ್ರೀಗಳು ಪೂಜೆ ನೆರವೇರಿಸಿದರು. ಅವರನ್ನು 'ನಾರಾಯಣ ಸ್ವರೂಪ'ರೆಂದು ಪೂಜಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. === ಶಿಷ್ಯ ಸ್ವೀಕಾರ ಮಹೋತ್ಸವದ ವಿಧಿ ವಿಧಾನಗಳು === ಕಿರಿಯ ಯತಿಗಳು ಪುಷ್ಪ, ಗಂಧ, ಅಕ್ಷತೆ ಹಾಗೂ ಬಂಗಾರದ ನಾಣ್ಯಗಳ ಮೂಲಕ ಹಿರಿಯ ಯತಿಗಳ ಪಾದಪೂಜೆ ನೆರವೇರಿಸಿ ನಮಸ್ಕರಿಸಿದರು. ಇದಾದ ನಂತರ ಹಿರಿಯ ಶ್ರೀಗಳು ಕಿರಿಯ ಶ್ರೀಗಳಿಗೆ ಯೋಗಪಟ್ಟ ಪ್ರದಾನಿಸಿ ವಿಧುಶೇಖರ ಭಾರತಿ ಸ್ವಾಮೀಜಿ ಎಂದು ನಾಮಕರಣ ಮಾಡಿದರು. "ಜಯನಾಮ ಸಂವತ್ಸರದ ಮಾಘ ಶುದ್ಧ ತದಿಗೆ, ಶುಕ್ರವಾರದ ಈ ದಿನ ದಕ್ಷಿಣಾಮ್ನಾಯ ಶಾರದಾ ಪೀಠದ ಉತ್ತರಾಧಿಕಾರಿಯಾಗಿ ಶ್ರೀ ವಿಧುಶೇಖರ ಭಾರತಿ ಅವರು ಪದಗ್ರಹಣ ಮಾಡಿದ್ದಾರೆ' ಎಂದು ಘೋಷಿಸಿದರು. ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಮುಂಬಯಿನ ಮೈಸೂರ್ ಅಸೋಸಿಯೇಷನ್ ಗೆ ಭೇಟಿ ಇತ್ತು ಶ್ರದ್ಧಾಳುಗಳನ್ನು ಆಶೀರ್ವದಿಸಿದರು. === ಅಡ್ಡಪಲ್ಲಕ್ಕಿ ಉತ್ಸವ === ಉಭಯ ಶ್ರೀಗಳು ಮಠದ ಪ್ರಾಂಗಣದಲ್ಲಿರುವ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ರಾತ್ರಿ ಪಟ್ಟಣದ ರಾಜಮಾರ್ಗದಲ್ಲಿ ಉಭಯ ಶ್ರೀಗಳ ವೈಭವದ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು. === ಶೃಂಗೇರಿ ಪಟ್ಟಣದಲ್ಲಿ ಸಂಭ್ರಮ === ನೂತನ ಸ್ವಾಮೀಜಿಯ ಪೀಠಾರೋಹಣದ ಅಂಗವಾಗಿ ಶೃಂಗೇರಿ ಪಟ್ಟಣದಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ. ಮಠದ ಆವರಣ, ಗುರು ನಿವಾಸಕ್ಕೆ ತೆರಳುವ ಮಾರ್ಗ, ಎಲ್ಲಾ ದೇವಾಲಯಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಶಾರದಾಂಬಾ ದೇಗುಲವನ್ನು ರಂಗೋಲಿ, ಪುಷ್ಪ, ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಅಡ್ಡಪಲ್ಲಕ್ಕಿ ಉತ್ಸವ ನಡೆದ ರಸ್ತೆಗಳನ್ನು ಸ್ವತ್ಛಗೊಳಿಸಿ, ಅಲಂಕೃತ ಚಪ್ಪರದಿಂದ ಶೃಂಗರಿಸಲಾಗಿತ್ತು. ಭಕ್ತರಿಗೆಲ್ಲಾ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ. ನೂತನ ಪೀಠಾಧಿಪತಿಗಳ ಪೀಠಾರೋಹಣ ಕಾರ್ಯಕ್ರಮದ ಅಂಗವಾಗಿ ಜಗದ್ಗುರುಗಳ ಅನುಗ್ರಹ ಪಡೆಯಲು ವಿವಿಧ ಗಣ್ಯರು ಆಗಮಿಸಿದ್ದರು. === ದಶನಾಮ ಸನ್ಯಾಸ ಪದ್ಧತಿ ಅನುಷ್ಠಾನ === ಶಂಕರಾಚಾರ್ಯರು ಶೃಂಗೇರಿಯಲ್ಲಿ ಸ್ಥಾಪಿಸಿದ 'ದಕ್ಷಿಣಾಮ್ನಾಯ ಪೀಠ'ದಲ್ಲಿ ದಶನಾಮ ಸನ್ಯಾಸ ಪದ್ಧತಿ ಅನುಷ್ಠಾನಗೊಳಿಸಿದ್ದರು. ಈ ಪದ್ಧತಿಯಲ್ಲಿ 'ಭಾರತಿ','ತೀರ್ಥ,'ಅರಣ್ಯ' ಎಂಬವು ಪ್ರಮುಖವಾದವು. ವಿಧುಶೇಖರರಿಗೆ 'ಭಾರತಿ ಅನುಷ್ಠಾನ ಪದ್ಧತಿ' ಪ್ರದಾನಿಸಲಾಗಿದೆ.